ಕರ್ಣಾಟಕ ಕೇಸರಿ: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಿಂದ ಪ್ರಕಟವಾಗುತ್ತಿದ್ದ ಮಾಸಪತ್ರಿಕೆ. 1928ರ ಜುಲೈ ತಿಂಗಳಿನಲ್ಲಿ ಪ್ರಾರಂಭವಾಗಿ ಎರಡು ವರ್ಷ ನಡೆಯಿತು. ಸಂಪಾದಕರು ಮಂಜೇಶ್ವರ ಅನಂತರಾವ್. ಇದರಲ್ಲಿ ಕಥೆ, ಕವನ, ಪ್ರಬಂಧ, ನಾಟಕ, ಲೇಖನ, ಸಂಶೋಧನೆ, ಇತಿಹಾಸ ಮುಂತಾದ ವಿವಿಧ ಪ್ರಕಾರಗಳ ಲೇಖನಗಳಿದ್ದು, ಪತ್ರಿಕೆಯಲ್ಲಿ 24 ಪುಟಗಳಿರುತ್ತಿದ್ದುವು. ಬಿಡಿ ಸಂಚಿಕೆಯ ಬೆಲೆ ನಾಲ್ಕಾಣೆ; ವಾರ್ಷಿಕ ಚಂದಾ ಎರಡೂವರೆ ರೂಪಾಯಿ. ಬೆಲೆ ನಾಲ್ಕಾಣೆ; ವಾರ್ಷಿಕ ಚಂದಾ ಎರಡೂವರೆ ರೂಪಾಯಿ. ಮೊದಲ ಪುಟದಲ್ಲಿ ಸಾಮಾನ್ಯವಾಗಿ ಕವಿತೆಯೊಂದು ಪ್ರಕಟವಾಗುತ್ತಿತ್ತು. ಅದರ ಬದಿಯ ಪುಟ ಪ್ರಾಚೀನ ದೇವಾಲಯಗಳ ಚಿತ್ರಗಳಿಗೆ ಮೀಸಲು.
ಎಂ. ಗೋವಿಂದ ಪೈ ಅವರ ಲಕ್ಷ್ಮಿ ಕಾಲ ವಿಚಾರ. ಶಿವರಾಮಕಾರಂತರ ವಿಜಯನಗರಕ್ಕೆ ಸಂಬಂಧಿಸಿದ ಲೇಖನಮಾಲೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ನಿಜಗಲ್ಲಿನ ರಾಣಿ ಮೊದಲಾದ ಹಲವಾರು ಸಂಶೋಧಕ ಚಾರಿತ್ರಿಕ ಲೇಖನಗಳು ಈ ಪತ್ರಿಕೆಯಲ್ಲಿ ಬೆಳಕು ಕಂಡವು. ಐರೋಡಿ ಶಿವರಾಮಯ್ಯ, ಹೊಸಕೆರೆ ಚಿದಂಬರಯ್ಯ, ಉಗ್ರಾಣ ಮಂಗೇಶರಾವ್, ಪಾಂಡೇಶ್ವರ ಗಣಪತಿರಾವ್, ಕಡೆಂಗೋಡ್ಲು ಶಂಕರಭಟ್ಟ, ಮಚ್ಚಿಮನೆ ಶಂಕರನಾರಾಯಣರಾವ್, ಬೆಳ್ಳೆ, ರಾಮಚಂದ್ರರಾವ್ ಮೊದಲಾದವರ ಲೇಖನಗಳಿರುತ್ತಿದ್ದುವು. ಪುತ್ತೂರಿನ ಹರಿಹರ ಪ್ರೆಸ್ಟಿನಲ್ಲಿ ಅಚ್ಚಾಗುತ್ತಿದ್ದ ಈ ಮಾಸ ಪತ್ರಿಕೆಯ ಪ್ರಸಾರ ದಕ್ಷಿಣ ಕನ್ನಡ ಜಿಲ್ಲೆಗೆ ಸೀಮಿತವಾಗಿದ್ದು ಆ ಭಾಗದ ಜನಪ್ರಿಯ ಪತ್ರಿಕೆಯೆನಿಸಿತ್ತು.	(ಎಸ್.ವಿ.ಪಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ